ಚಿತ್ತಾಲರ ಕೊನೆಯ ಕತೆಗಳ ಸಂಕಲನ 'ಕೋಳಿ ಕೂಗುವ ಮುನ್ನ'. ಈ ಸಂಕಲನದ ಬೆನ್ನುಡಿಯಲ್ಲಿ ವಿಮರ್ಶಕ ಜಿ.ಎಸ್. ಆಮೂರ ಅವರು 'ಸಣ್ಣ ಕಥೆಯ ಕ್ಷೇತ್ರದಲ್ಲಿ ಯಶವಂತರು ದೊರಕಿಸಿದ ಯಶಸ್ಸು ಶ್ರೇಷ್ಠ ಮಟ್ಟದ್ದು ಎನ್ನುವುದರಲ್ಲಿ ಸಂಶಯವಿರಲಾರದು. ಅವರ ಈ ಸಾಧನೆಗೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅವರ ಗತಿಶೀಲ ಸಂವೇದನೆ, ಅವರ ಸಾಹಿತ್ಯಕ್ಕೆ ಸಣ್ಣ ಹಾಗೂ ಸಾಂಗತ್ಯಗಳನ್ನು ತಂದುಕೊಡುವ ಮೂಲಭೂತ ಆಸ್ಥೆ, ಅನುಭವ ಅವರಲ್ಲಿವೆ. ತಮ್ಮದೇ ಆದ ಪ್ರಬುದ್ಧ ಜೀವನದೃಷ್ಟಿಯೂ ಅವರಿಗಿದೆ. ಇದರ ಜೊತೆಗೆ ಪರಿಸರದ ಸ್ಥಿತ್ಯಂತರಗಳಿಗೆ ಸೃಜನಶೀಲವಾಗಿ ಪ್ರತಿಕ್ರಿಯಿಸಬಲ್ಲ ಚೈತನ್ಯಶೀಲತೆಯನ್ನು ಅವರು ಹೊಂದಿದ್ದಾರೆ. ಎರಡನೆಯದಾಗಿ, ತಮ್ಮ ವಿಶಿಷ್ಟ ದರ್ಶನದ ವಿವಿಧ ಮುಖಗಳನ್ನು ಸಾಕಾರಗೊಳಿಸಬಲ್ಲ ಕಲೆ, ಈ ಕಲೆಯನ್ನು ಸಾಧಿಸುವುದಕ್ಕೆ ಅವಶ್ಯವಾದ ಪರಿಶ್ರಮ, ಪೂರ್ವಚಿಂತನ, ಪ್ರಯೋಗಶೀಲತೆ, ಭಾಷಾ ಸಂಪತ್ತೂ ಅವರಲ್ಲಿವೆ' ಎಂದು ವಿವರಿಸಿದ್ದಾರೆ.